logo

ಹೆಂಡತಿ, ಸಿಂಧು ಭಾರ್ಗವ್ ಕವನ

ಬರವಣಿಗೆ ಎನ್ನುವುದು ಕವಿಯ ಮನಸ್ಸಿನ ವಿವಿಧ ತುಮುಲಗಳನ್ನು, ಭಾವನೆಗಳನ್ನು ಹೊರಹಾಕುವ ಪ್ರಕ್ರೀಯೆ ಎನ್ನಬಹುದು. ಕೆಲವರು ಕಲ್ಪನೆಗೆ ಜೀವನೀಡುತ್ತಾರೆ. ಇನ್ನು ಕೆಲವರು ತಮ್ತಮ್ಮ ಪ್ರೀತಿ ಪಾತ್ರರ ಹೊಗಳಿ ಬರೆಯುತ್ತಾರೆ. ಇನ್ನು ಸಾಮಾಜಮುಖಿಯಾಗಿ, ಕ್ರಾಂತಿಕಾರಿಯಾಗಿ ಸಮಾಜದಲ್ಲಿ ಹಾಗೂ ಜನರ ಮನಸ್ಸಿನಲ್ಲಿ ಸಂಚಲನ ಮೂಡಿಸುವಂತೆ ಬರೆಯುವವರು ಇದ್ದಾರೆ. ಅದಕ್ಕೇ ತಾನೆ "ಲೇಖನಿ ಎಂಬುದು ಖಡ್ಗದ ಹಾಗೆ ಹರಿತ" ಎನ್ನುವುದು.

ಉಡುಪಿ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಕೋಟ ಶಿವರಾಮ ಕಾರಂತರಿಂದ ಹಿಡಿದು ಅದೆಷ್ಟೋ ಹಿರಿಯ ಸಾಹಿತಿಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಹಾಕಿಕೊಟ್ಟ ಹಾದಿಯಲ್ಲಿ ಈಗಿನ ಪೀಳಿಗೆಯವರು ನಡೆಯುತ್ತಿದ್ದಾರೆ ಎಂಬುದೇ ವಿಶೇಷ. ಅವರಲ್ಲಿ ನಮ್ಮ ಕಿಶೋರ್ ಗೊನ್ಸಾಲ್ವಿಸ್ (ಕಿಶೂ ಬಾರ್ಕೂರ್), ಎರಿಕ್ ಸೋನ್ಸ್, ರೇಖಾ ವಿ. ನಾಯಕ್ ಎನ್ನುವುದಕ್ಕೆ ಬಾರ್ಕೂರಿಗರಾದ ನಮಗೆ ಹೆಮ್ಮೆ. 

ನಮ್ಮ ಬಾರಕೂರಿನ ಪುಟ್ಟ ಹಳ್ಳಿ ಹೇರಾಡಿಯಲ್ಲಿ ಶ್ರೀಮತಿ ವಸಂತಿ ಭಟ್ ಮತ್ತು ಚಂಡೆ ಶ್ರೀ ನರಸಿಂಹ ಭಟ್'ರ‌ (ಬಾರಕೂರಿನಲ್ಲಿ ಪ್ರಖ್ಯಾತ ಪಾಕತಜ್ಞರು) ಎರಡನೇ ಪುತ್ರಿಯಾಗಿ‌ ಜನಿಸಿದ ತುಳಸಿ ನವೀನ್, ಪ್ರಾಥಮಿಕ ಶಿಕ್ಷಣವನ್ನು ಹೇರಾಡಿ ಶಾಲೆಯಲ್ಲಿಯೂ, ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಣವನ್ನು NJC ಬಾರಕೂರಿನಲ್ಲಿ ಮುಗಿಸಿದರು. ನಂತರ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್‌ ಉಡುಪಿಯ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಡಿಯಾಳಿಯಲ್ಲಿ ಮುಗಿಸಿದರು. ಕಾಲೇಜು ಜೀವನ ಮುಗಿಸಿ ನವೀನ್ ಭಟ್ ರನ್ನು ವಿವಾಹವಾಗಿ  ಬೆಂಗಳೂರಿಗೆ ಬಂದು ನೆಲಸಿದರು.  

ಸಾಮಾಜಿಕ ಜಾಲತಾಣಗಳಾದ Facebook, WhatsApp ಗಳಿಂದ ನಮಗೆ ಲಾಭವೂ ಇದೆ ಹಾಗೆ ಅತೀಯಾದರೆ ತೊಂದರೆಯೂ ಆಗುವುದು. ಸಿಕ್ಕಿದ ಅವಕಾಶವನ್ನು ಪರಿಪೂರ್ಣವಾಗಿ ಉಪಯೋಗಿಸುವ ಕಲೆ , ಕಲಾವಿದನಿಗೆ ಇರಬೇಕು. ಇದಕ್ಕೆ ನಿದರ್ಶನ  ತುಳಸಿ ನವೀನ್, ಗೃಹಿಣಿಯಾದ ಇವರು ಬಿಡುವಿನ ಸಮಯದಲ್ಲಿ ಸಿಂಧುಭಾರ್ಗವ್ ಹೆಸರಿನಲ್ಲಿ ಬರೆಯುವುದನ್ನು ಹವ್ಯಾಸವಾಗಿ ಶುರುಮಾಡಿದರು. (2012 ರಲ್ಲಿ) ಅದಕ್ಕೆ ಪ್ರೇರಣೆಯಾದದ್ದು ಕನ್ನಡಬ್ಲಾಗ್ ಎನ್ನುವ ತಂಡ. ಅದೊಂದು ಯುವ ಬಹರಗಾರರ ವೇದಿಕೆಯಾಗಿತ್ತು. ಅಲ್ಲಿ ಪ್ರಸಾದ್.ವಿ. ಮೂರ್ತಿ ಎಂಬ ಮಿತ್ರನು ಸರಾಗವಾಗಿ ಕವಿತೆಗಳನ್ನು ಬರೆಯುತ್ತಿದ್ದುದನ್ನು ನೋಡಿ ಬಹಳ ಆಕರ್ಷಿತರಾಗಿ "ಈ ರೀತಿ ಬರೆಯಲು ತನಗೂ ಯಾಕೆ‌ ಸಾಧ್ಯವಿಲ್ಲ ಎಂದು ಸಣ್ಣ ಚುಟುಕುಗಳನ್ನು ಬರೆಯಲು ಲೇಖನಿ ಹಿಡಿದರು. ಈಗ ಕಥೆ, ಲೇಖನಗಳನ್ನು ಬರೆಯುತ್ತಿದ್ದಾರೆ. ಅಲ್ಲದೇ ಸರಳ-ಸುಲಭವಾಗಿ ಕವಿತೆ, ಹಾಡು ಬರೆಯಲು 2016 ರಲ್ಲಿ ಶುರುಮಾಡಿದರು. ಅವರು ಬರೆದ ಕವನ ಓದಿ ತಿದ್ದಿ ತೀಡಿದವರು ಶ್ರೀಯುತ ಕೃಷ್ಣಪ್ರಸಾದ್.(USA) ಇವಳಿಗೆ ಬರೆಯುವ ಕಲೆ ಇದೆ, ಆದರೆ ಹೇಗೆ ಬರೆಯುವುದು ಎಂದು ತಿಳಿದಿಲ್ಲ ಎಂದು ಅರಿತು ಕವಿತೆ ಅಥವಾ ಹಾಡು ಬರೆಯುವುದನ್ನು ಸುಂದರವಾಗಿ ತಿಳಿಸಿಕೊಟ್ಟರು. ಕಳೆದ ಮೂರು ವರುಷದಿಂದ "ಯುಗಪುರುಷ ಕಿನ್ನಿಗೋಳಿ" ಮಾಸಪತ್ರಿಕೆಯು ಇವರ ಲೇಖನಗಳು, ಕಥೆಗಳನ್ನು ಪ್ರಕಟಿಸುತ್ತಾ ಬಂದಿದೆ. ಇನ್ನು "ಸಿಂಹನೋಟ ಪತ್ರಿಕೆ", "ಸಂಪದಸಾಲು" ಮಾಸಪತ್ರಿಕೆಯಲ್ಲಿಯೂ ಹಾಗೆ "ಕನ್ನಡಪ್ರಭ"ದಲ್ಲಿ ವಿಶೇಷವಾಗಿ "ತಾಯಿ" ಬಗ್ಗೆ ಬರೆದ ಲೇಖನ ಪ್ರಕಟಗೊಂಡಿತ್ತು.  

ಇನ್ನು ಆನ್ಲೈನ್ ಪತ್ರಿಕೆ, ಬ್ಲಾಗ್ ಗಳಾದ ರೀಡೂಕನ್ನಡ ತಂಡ, ಪಂಜುಪತ್ರಿಕೆಯಲ್ಲಿ, ನೇಸರನ ಜಗಲಿಯಲ್ಲಿ ಬ್ಲಾಗ್ ಗಳಲ್ಲಿ ಲೇಖನಗಳು,‌ ಕಾವ್ಯ_ಖಜಾನೆಯಲ್ಲಿ, ಹೊನಲು.ನೆಟ್, ನ್ಯೂಸ್ ಕನ್ನಡ ಆನ್ಲೈನ್ ಪೇಪರ್ ಗಳಲ್ಲಿ ಕವಿತೆಗಳು ಪ್ರಕಟಗೊಂಡಿದ್ದವು. ಅವರು ಬರೆದ "ಜೀವನದ ಸಂತೆಯಲಿ" ಎಂಬ ಕೃತಿಯು ಬಿಡುಗಡೆಯ ಹಂತದಲ್ಲಿದೆ..

ಈಗಷ್ಟೆ ಅಂಬೆಗಾಲಿಡುತಲಿರುವ ಯುವ ಬರಹಗಾರ್ತಿಗೆ ತುಂಬುಹೃದಯದಿಂದ ಹರಸೋಣ. ಇನ್ನಷ್ಟು ಯಶಸ್ಸು ಅವರದಾಗಲಿ. ದೇವರು ಅವರಿಗೆ ಆಯುರಾರೋಗ್ಯವನ್ನು ನೀಡಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದು ಆಶಿಸುತ್ತೇನೆ ಹಾಗೂ ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇನೆ.

-ಹರೀಶ್ ಆಚಾರ್ಯ


ಹೆಂಡತಿ

ಸಿಂಧು ಭಾರ್ಗವ್, ಬೆಂಗಳೂರು.


ಹೆಂಡತಿ ಮನೆಯಲಿ ಇದ್ದರೆ ಮನೆಯೇ ನಂದನವನವು

ಹೆಂಡತಿ ತವರಿಗೆ ಹೊರಟರೆ ಬಿಕೋ ಎನ್ನುವ ಮನವು

ಹೆಂಡತಿ ನಗುತಲಿ ನಿಂತರೆ ಅಪ್ಸರೆ ಎದುರಿಗೆ ಬಂದಂತೆ

ಹೆಂಡಂತಿ ಸಿಡುಕುತ ನಿಂತರೆ ಪಟಾಕಿ ಸಿಡಿದಂತೆ


ಹೆಂಡತಿ ದೇವರ ದೀಪವ ಹಚ್ಚಲು

ಹೆಂಡತಿ ಮನೆಯಂಗಳದ ರಂಗೋಲಿ

ಹೆಂಡತಿ ಹೂವಿನ ಘಮದಲಿ ಇರುವಳು

ಹೆಂಡತಿ ನೋಡಲು ತರತರ ತರಕಾರಿ


ಹೆಂಡತಿ ನೀ  ಹಡೆಯುವೆ ಮಕ್ಕಳ

ನಮ್ಮನೆ ಸಂತಾನ ಲಕ್ಷ್ಮಿಯು

ನಾಗಿಣಿ ಜಡೆಯ ನಡಿಗೆಯಲಿ

ಹೆಂಡತಿ ನೀ ಸೌಂದರ್ಯದ ಗಣಿಯು


ತಪ್ಪನು ತಿದ್ದುತ ಬಾಳಲು ಕಲಿಸುವ

ಹೆಂಡತಿ ಮನೆಯಲಿ ಶಿಕ್ಷಕಿಯು

ವಿಧವಿಧ ಭಕ್ಷ್ಯಗಳ ಮಾಡಿ ಬಡಿಸುತ

ಹೆಂಡತಿ ಮನೆಯೊಳ ಬಾಣಸಿಗಳು


ಅತ್ತೆ-ಮಾವನ ನೋಡಿಕೊಳ್ಳುತ

ದಾದಿಯ ಕೆಲಸವ ಮಾಡುವಳು

ಎಳೆ ಮಗುವಿನಿಂದ ಮುದುಕರ ತನಕ

ಮನೆಯವರ ಚಾಕರಿ ಮಾಡುವಳು


ನೋಯಿಸದಿರಿ ಅವಳ ಮನಸನು

ಕೆಲಸದ ಆಳು ಅವಳಲ್ಲ 

ಅವಳಿಗೂ ಮನಸಿದೆ ಎಂದು ಅರಿಯಿರಿ

ಅವಳ ತ್ಯಾಗಕೆ ಕೊನೆಯಿಲ್ಲ.






Add comment